ಕೋಲ್ಕತ್ತಾ: 22 ವರ್ಷ ವಯಸ್ಸಿನ ಯುವತಿಯೊಬ್ಬಳು 15 ವರ್ಷದ ಬಾಲಕನೊಂದಿಗೆ ವಿವಾಹವಾಗಿರುವ ಪ್ರಸಂಗ ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ನಡೆದಿದೆ. 15 ವರ್ಷದ ಬಾಲಕ ನಾಡಿಯಾದ ಕೃಷ್ಣನಗರ ಪ್ರದೇಶದವನು. ಯುವತಿ ಜೊತೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದನು ಎಂದು ತಿಳಿದು ಬಂದಿದೆ. ನಂತರ ಇವರ ಸ್ನೇಹ, ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿದ್ದಾರೆ.
ಡಿಸೆಂಬರ್ 25ರಂದು ಮನೆಯಿಂದ ಓಡಿ ಹೋಗಿರುವ ಈ ಜೋಡಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದೆ. ತದನಂತರ ನಿನ್ನೆ ಲೋಕಲ್ ರೈಲಿನಲ್ಲಿ ಶಾಂತಿಪುರಕ್ಕೆ ಬರುತ್ತಿದ್ದ ವೇಳೆ ಅವರ ಮಾತು ಕೇಳಿ ಪ್ರಯಾಣಿಕರಿಗೆ ಅನುಮಾನ ಬಂದಿದೆ. ಹೀಗಾಗಿ, ಚೈಲ್ಡ್ಲೈನ್ಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರೈಲ್ವೆ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇದೀಗ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಶಾಂತಿಪುರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಬಾಲಕ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಇಬ್ಬರೂ ಉತ್ತರಪ್ರದೇಶಕ್ಕೆ ಹೋಗುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು.