ಬೆಂಗಳೂರು: ನವಂಬರ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಮಾಡಲಾಗಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದ ಬಿಬಿಎಂಪಿ ಇದೀಗ ನವಂಬರ ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ. ಮಳೆ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿಕೇವಲ ಬಡವರ ಮನೆಗಳ ಮೇಲೆ ದಬ್ಬಾಳಿಕೆ ನಡೆಸಿ ಶ್ರೀಮಂತರ ಬೆನ್ನಿಗೆ ಬೆಣ್ಣೆ ಸವರಿದ್ದ ಬಿಬಿಎಂಪಿ ಅಧಿಕಾರಿಗಳ ಅಸಲಿ ಮುಖ ಇದೀಗ ಬಯಲಾಗಿದೆ. ಆರಂಭದಲ್ಲಿ ಬಡವರ ಮನೆಗಳಿಗೆ ಜೆಸಿಬಿಗಳನ್ನು ನುಗ್ಗಿಸಿ ಬಳಿಕ ಸರ್ವೇ ಮಾಡಬೇಕು. ಅದುವರೆಗೂ ಡೆಮಾಲೇಷನ್ ನಿಲ್ಲಿಸಲಾಗುವುದು.
ಸರ್ವೇ ಮಾಡಿ ನವಂಬರ್ ಅಂತ್ಯದ ವೇಳೆಗೆ ಎಲ್ಲ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿಕೆ ನೀಡಲಾಗಿತ್ತು. ಬಿಬಿಎಂಪಿ ಯವರ ಈ ಧೋರಣೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೆ ಮತ್ತೊಂದು ನ್ಯಾಯ ಅನ್ನೋದನ್ನು ಪ್ರೂವ್ ಮಾಡಿದಂತಾಗಿದೆ. ಆದರೆ,ಕೊಟ್ಟ ಮಾತಿಗೆ ನೀಡಿದ್ದ ಗಡುವು ಮುಗಿದಿರಬಹುದು ಆದರೆ,ನಾವು ಒತ್ತುವರಿ ತೆರವು ಕಾರ್ಯಚರಣೆಗೆ ಬ್ರೇಕ್ ಹಾಕಿಲ್ಲ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.ಒತ್ತುವರಿ ಸರ್ವೇ ಮಾಡಿಸಲು ಸರ್ವೇಯರ್ಗಳ ಕೊರತೆ ಎದುರಾಗಿತ್ತು. ಇದೀಗ ಸರ್ವೇಯರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಒತ್ತುವರಿ ಪತ್ತೆಕಾರ್ಯ ಕೈಗೊಂಡು ಡೆಮಾಲೇಷನ್ ಕಾರ್ಯ ಆರಂಭಿಸುತ್ತೇವೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಭರವಸೆ ನೀಡಿದ್ದಾರೆ.

