ಬೆಂಗಳೂರು: ಸಶಕ್ತ ಭಾರತವನ್ನು ಕಟ್ಟುವ ಉದ್ದೇಶದಿಂದ 34 ವರ್ಷಗಳ ನಂತರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 159ನೇ ಜಯಂತಿಯಲ್ಲಿ ಮಾತನಾಡಿದ ಅವರು, ವಿವೇಕಾನಂದರು ಇಡೀ ಪ್ರಪಂಚಕ್ಕೆ ಭಾರತ ಮತ್ತು ಭಾರತೀಯತೆಯನ್ನು ಪರಿಚಯಿಸಿದರು.
ಅವರಿಂದ ಪ್ರಭಾವಿತರಾಗಿರುವ ಪ್ರಧಾನಿ ಮೋದಿ ಈಗ ಎನ್ಇಪಿ ಮೂಲಕ ಆತ್ಮನಿರ್ಭರವನ್ನು ಕಟ್ಟಲು ದಾಪುಗಾಲಿಡುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಈ ಆಶಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಬಹುತೇಕ ಈ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಶೇ.100ರಷ್ಟು ಡಿಜಿಟಲೀಕರಣ ಆಗಲಿದೆ. ಈ ಮೂಲಕ ಸಮಾಜದ ಸಬಲೀಕರಣ ಮತ್ತು ಸಮಾನತೆ ಎರಡನ್ನೂ ಸಾಧಿಲಿದ್ದೇವೆ ಎಂದು ಸಚಿವ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
