ವಿಪರೀತ ಸುರಿದ ಮುಂಗಾರು ಮಳೆ ಪರಿಣಾಮ ಪ್ರಮುಖ ಅಡಕೆ ಬೆಳೆ ನಿರೀಕ್ಷೆಗೂ ಮೀರಿ ಹಾನಿಗೆ ಒಳಗಾಗಿದೆ. ಬೆಳೆ ರಕ್ಷಣೆಗೆ ರೈತರು ಎಷ್ಟೇ ಕಸರತ್ತು ನಡೆಸಿದರೂ ಪಾರಾಗಲು ಸಾಧ್ಯವಾಗಿಲ್ಲ.ಮಳೆ ಸುರಿಯುವ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಬೆಳೆ ತೀವ್ರ ರೀತಿಯಲ್ಲಿ ಹಾನಿಗೀಡಾಗಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ಆಗುಂಬೆ, ಕಸಬಾ ಹೋಬಳಿಯಲ್ಲಿ ಹೆಚ್ಚಾಗಿದ್ದ ಎಲೆಚುಕ್ಕಿ ರೋಗ ಈ ವರ್ಷ ಅಗ್ರಹಾರ, ಮಂಡಗದ್ದೆ, ಮುತ್ತೂರು ಹೋಬಳಿ ಭಾಗದಲ್ಲೂ ಕಂಡುಬಂದಿದೆ. ಇನ್ನೊಂದೆಡೆ ಅಡಕೆ ಸಸಿಗಳಲ್ಲಿ ಕೀಟಬಾಧೆ ಉಲ್ಬಣಿಸಿದ್ದು ರಾತ್ರಿ ಹೊತ್ತು ಹಾವಳಿ ಹೆಚ್ಚಿದೆ
ಕಳೆದ 4 ವರ್ಷಗಳಿಂದ ಅಡಕೆ ಮರಗಳಲ್ಲಿ ಕಂಡು ಬಂದಿರುವ ಎಲೆಚುಕ್ಕಿ ರೋಗ ಈ ವರ್ಷ ವ್ಯಾಪಕವಾಗಿದೆ. ರೋಗಕ್ಕೆ ತುತ್ತಾಗಿರುವ ಅಡಕೆ ಮರಗಳು ಸೊರಗುತ್ತಿದ್ದು ಕೆಲವು ಮರಗಳು ನಿತ್ರಾಣ ಸ್ಥಿತಿಗೆ ತಲುಪಿವೆ. ಅಕ್ಟೋಬರ್ ಮೊದಲ ವಾರದಿಂದ ರೋಗದ ಪರಿಣಾಮ ಹೆಚ್ಚಾಗಿದೆ.
ಕೊಳೆರೋಗ, ಎಲೆಚುಕ್ಕಿ ರೋಗದ ಆತಂಕದಲ್ಲಿ ರೈತರು ಈ ವರ್ಷ 4ಕ್ಕೂ ಹೆಚ್ಚು ಬಾರಿ ಬೋರ್ಡೊ ಮಿಶ್ರಣ ಸಿಂಪಡಿಸಿದ್ದಾರೆ. ಕೊಳೆರೋಗ ನಿಯಂತ್ರಣಗೊಂಡರೂ ಎಲೆಚುಕ್ಕಿ ಉಲ್ಬಣ ಹಂತ ತಲುಪಿದೆ. ಕೊಯ್ಲಿಗೆ ಸಿದ್ಧವಾಗಿರುವ ಅಡಕೆ ಕಾಯಿಗಳು ಕೆಲದಿನಗಳಿಂದ ಉದುರುತ್ತಿದ್ದು ಬೂದುಗೊಳೆ ರೋಗದ ಆತಂಕ ರೈತರಿಗೆ ಕಾಡುವಂತೆ ಮಾಡಿದೆ.