ಬೆಂಗಳೂರು:- ಮಹಿಳೆಯರೇ ತುಂಡು ತುಂಡು ಬಟ್ಟೆ ಹಾಕೊಂಡು ದೇವರ ದರ್ಶನಕ್ಕೆ ಹೋಗುತ್ತಿದ್ದರೆ ಈ ಸುದ್ದಿ ಪೂರ್ತಿಯಾಗಿ ಓದಿ.
ರಾಜ್ಯದ ದೇವಾಲಯಗಳಲ್ಲಿ ಡ್ರೆಸ್ ಕೋಡ್ ಜಾರಿಗೆ ಚಿಂತನೆ ನಡೆಸಲಾಗಿದ್ದು, ತುಂಡು ಬಟ್ಟೆ ಧರಿಸುವವರಿಗೆ ಇನ್ಮುಂದೆ ದೇವಸ್ಥಾನದ ಪ್ರವೇಶ ಇರುವುದಿಲ್ಲ.
ಈ ಬಗ್ಗೆ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ.
ಬೆಂಗಳೂರಿನ 50 ದೇವಸ್ಥಾನಗಳು ಸೇರಿದಂತೆ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ಸಂಚಾಲಕ ಮೋಹನ್ ಗೌಡ ಅವರು, ‘ಇಂದು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಕೆಲ ಪ್ರಗತಿಪರರು, ವಿಚಾರವಾದಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಅವರು ಬಿಳಿ ಟ್ರೌಸರ್ ನಿಲುವಂಗಿ ಧರಿಸುವ ಕ್ರಿಶ್ಚಿಯನ್ ಪಾದ್ರಿಗಳ, ಗಿಡ್ಡ ಪೈಜಾಮಾಗಳನ್ನು ಧರಿಸುವ ಮುಲ್ಲಾ-ಪಾದ್ರಿಗಳ ಅಥವಾ ಕಪ್ಪು ಮುಸುಕು ಧರಿಸುವ ಮುಸ್ಲಿಂ ಮಹಿಳೆಯರ ಬಟ್ಟೆಗಳನ್ನು ವಿರೋಧಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ
ದೇವರ ದರ್ಶನಕ್ಕಾಗಿ ತುಂಡು ಬಟ್ಟೆ ಅಥವಾ ಸಾಂಪ್ರದಾಯಿಕವಲ್ಲದ ಉಡುಗೆಯಲ್ಲಿ ದೇವಸ್ಥಾನಗಳಿಗೆ ಹೋಗುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಾರದು.
ಪ್ರತಿಯೊಬ್ಬರಿಗೂ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಏನು ಧರಿಸಬೇಕೆಂಬ ವೈಯಕ್ತಿಕ ಸ್ವಾತಂತ್ರ್ಯವಿದೆ. ಆದರೆ ಇದು ದೇವಸ್ಥಾನ ಎಂದಿದ್ದಾರೆ. ದೇವಾಲಯದ ಆವರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಧರ್ಮವನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ್ದಾರೆ.