ಹುಬ್ಬಳ್ಳಿ: ನಾನು ಬಾಲ್ ಇದ್ದಂತೆ, ತುಳಿದಷ್ಟು ಮೇಲೆ ಪುಟಿದೇಳುತ್ತೇನೆ. ಈಡಿಗ ಸಂಘದ ಸಮಾವೇಶ ರಾಜಕೀಯ ಪ್ರೇರಿತ, ನಾನು ಭಾಗಿಯಾಗಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ಬಿ.ಕೆ ಹರಿಪ್ರಸಾದ್ (BK Hariprasad) ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರು ತೀರ್ಮಾನಿಸುತ್ತಾರೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ತುಳಿದಷ್ಟು ಮೇಲೆ ಪುಟಿಯುತ್ತೇನೆ. ಬೆಂಗಳೂರಲ್ಲಿ ಈಡಿಗ ಸಮಾವೇಶ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಎಂದರು.
ಕುತಂತ್ರದಿಂದ ಸಮಾವೇಶ ಆಯೋಜನೆ ಮಾಡಲಾಗಿದೆ. ಸಿಎಂ, ಡಿಸಿಎಂ ಭಾಗಿಯಾಗುತ್ತಿದ್ದಾರೆ. ಆದರೆ ನಾನು ಈ ಸಮಾವೇಶಕ್ಕೆ ಹೋಗುತ್ತಿಲ್ಲ. ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವೆ. ಈಡಿಗ ಸಮಾಜದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಇದೆ. ಆದರೆ ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ. 75 ವರ್ಷಗಳ ಅಮೃತ ಮಹೋತ್ಸವ ಎಂದು ಹೇಳುತ್ತಾರೆ. ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಯಾವಾಗ ಮಾಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.