ಹುಬ್ಬಳ್ಳಿ: ಬಿಜೆಪಿ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ ಅದನ್ನು ಎತ್ತುವ ಕೆಲಸ ಮಾಡಲಿ. ಒಬ್ಬ ವಿರೋಧಪಕ್ಷದ ನಾಯಕರನ್ನು ನೇಮಿಸಲಾಗದಷ್ಟು ದುಸ್ಥಿತಿಗೆ ಬಂದಿರುವ ಬಿಜೆಪಿಯು ಮುರುಕಲು ಮನೆಯಾಗಿದ್ದು, ಕಾಂಗ್ರೆಸ್ಗೆ ನೀತಿ ಪಾಠ ಹೇಳುವು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಟೀಕಿಸಿದ್ದಾರೆ. ಅವರು ಪತ್ರಿಕಾ ಪ್ರಕಟಣೆ ನೀಡಿ, ಬಿಜೆಪಿಗೆ ರಾಜ್ಯದ ಜನ ಕೇವಲ 66 ಸ್ಥಾನಗಳನ್ನು ನೀಡಿದ್ದಾರೆ. ಅವರ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಅವರಿಗೆ ಅದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. ನಾಲ್ಕು ಗುಂಪುಗಳಾಗಿವೆ ಎಂದು ಹೇಳುತ್ತಾ ತಿರುಗುತ್ತಿದ್ದಾರೆ.
ಇಡೀ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಒಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ರಾಜ್ಯದ ವಿರೋಧ ಪಕ್ಷದ ನಾಯಕರನ್ನು ನೇಮಿಸಲಾಗದಷ್ಟು ದುಸ್ಥಿತಿಗೆ ಬಂದಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆಯುವಂತಾಗಿದೆ. ಬಿಜೆಪಿಯ ಶಾಸಕರುಗಳು ನಾಯಕರುಗಳು ಅವರ ಪಕ್ಷದ ವಿರುದ್ಧವೇ ಮಾಧ್ಯಮಗಳ ಮುಂದೆ ಹರಿ ಹಾಯುತ್ತಿದ್ದಾರೆ. ಅದರ ಬಗ್ಗೆ ಗಮನ ಕೊಡುವುದು ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಮೂರು ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದು ಕಂಡಿದ್ದೇವೆ. ಇವತ್ತು ಪಕ್ಷ ಕಟ್ಟಿದಂಥ ಮಾನ್ಯ ಯಡಿಯೂರಪ್ಪರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಕುಟುಕಿದ್ದಾರೆ. ಬಿಜೆಪಿಯವರು ಬರದ ಬಗ್ಗೆ ಅಧ್ಯಯನ ತಂಡ ಮಾಡಿಕೊಂಡು ತಿರುಗುತ್ತಿದ್ದಾರೆ. ಅವರಿಗೆ ಸ್ವಲ್ಪವೂ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಕೇಂದ್ರಕ್ಕೆ ಒತ್ತಡ ಹಾಕಿ ಬರಗಾಲದ ಪರಿಹಾರವನ್ನು ಕೊಡಿಸಲಿ.
ರಾಜ್ಯದಿಂದ 19,000 ಕೋಟಿಗೂ ಅಧಿಕ ಬರ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಅದನ್ನು ಕೊಡಿಸುವ ಕೆಲಸ ಬಿಜೆಪಿ ಮಾಡಲಿ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ. ಬಿಜೆಪಿಗೆ ನಮ್ಮ ಗ್ಯಾರೆಂಟಿ ಯೋಜನೆಗಳಿಂದ ಹೊಟ್ಟೆ ಉರಿಯುತ್ತಿದೆ . ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ. ಇದನ್ನು ಆರಗಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿ ನಮ್ಮ ಗ್ಯಾರಂಟಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.