‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭವಾಗಿ 70 ದಿನಗಳು ಕಳೆದಿವೆ. ವಾರದಿಂದ ವಾರಕ್ಕೆ ಮನೆ ಒಬ್ಬೊಬ್ಬ ಸದಸ್ಯರನ್ನು ಕಳೆದುಕೊಳ್ಳುತ್ತಿದೆ. ಕಳೆದ ವಾರ ಶೋಭಾ ಶೆಟ್ಟಿ ತಾವಾಗಿಯೇ ಮನೆಯಿಂದ ಹೊರ ಹೋದ ಕಾರಣ ಯಾರನ್ನು ಎಲಿಮಿನೇಟ್ ಮಾಡಿರಲಿಲ್ಲ. ಪ್ರತಿ ವೀಕೆಂಡ್ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಆದರೆ ಕೆಲವು ವಾರ ವಿನಾಯಿತಿ ಇರುತ್ತದೆ. ಈ ವಾರ ಕೂಡ ಯಾರೂ ಎಲಿಮಿನೇಟ್ ಆಗಿಲ್ಲ. ಆದರೆ ಈ ವಿಚಾರವನ್ನು ಬಿಗ್ ಬಾಸ್ ಮನೆಯೊಳಗಿನ ಸದಸ್ಯರಿಗೆ ಇನ್ನೂ ತಿಳಿಸಿಲ್ಲ ನಾಮಿನೇಷನ್ ಆಗಿದ್ದವರ ಪೈಕಿ ಈ ವಾರ ಚೈತಾರ ಕುಂದಾಪುರ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಡೇಂಜರ್ ಜೋನ್ ತಲುಪಿದ್ದರು. ಆದರೆ ಕೊನೇ ಕ್ಷಣದಲ್ಲಿ ಐಶ್ವರ್ಯಾ ಅವರಿಗೆ ಒಂದು ಟ್ವಿಸ್ಟ್ ನೀಡಲಾಯಿತು.
ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಸ್ವಲ್ಪ ಬೇರೆ ರೀತಿ ಇರಲಿದೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಡೇಂಜರ್ ಜೋನ್ನಲ್ಲಿ ಇರುವ ಚೈತ್ರಾ ಕುಂದಾಪುರ ಅವರು ಕನ್ಫೆಷನ್ ರೂಮ್ಗೆ ಬರಬೇಕು. ಐಶ್ವರ್ಯಾ ಸಿಂಧೋಗಿ ಅವರು ಆ್ಯಕ್ಟಿವಿಟಿ ಏರಿಯಾಗೆ ಬರಬೇಕು ಎಂದು ಆದೇಶಿಸಲಾಯಿತು. ಟೆನ್ಷನ್ ಮಾಡಿಕೊಂಡ ಐಶ್ವರ್ಯಾ ಅವರು ಆ್ಯಕ್ಟಿವಿಟಿ ಏರಿಯಾದಲ್ಲಿ ಬಂದು ನಿಂತುಕೊಂಡರು.
ಇನ್ನೇನು ತಾವು ಎಲಿಮಿನೇಟ್ ಆಗಬಹುದು ಎಂದುಕೊಂಡಿದ್ದ ಐಶ್ವರ್ಯಾ ಅವರಿಗೆ ಕೊನೇ ಹಂತದಲ್ಲಿ ಸರ್ಪ್ರೈಸ್ ಸಿಕ್ಕಿತು. ‘ವಾಪಸ್ ಹೋಗಿ ಆಟ ಆಡಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಆ ಮಾತು ಕೇಳಿ ಐಶ್ವರ್ಯಾ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ಅವರು ಅಳಲು ಆರಂಭಿಸಿದರು. ನಿಂತಲ್ಲೇ ಅವರು ಕುಸಿದರು. ಬಳಿಕ ಕುಳಿತುಕೊಂಡು ಕಣ್ಣೀರು ಹಾಕಿದರು. ವಾಪಸ್ ಅವರು ಬಿಗ್ ಬಾಸ್ ಮನೆಯ ಒಳಗೆ ಬಂದಾಗ ಎಲ್ಲರಿಗೂ ಅಚ್ಚರಿ ಆಯಿತು.
ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ ಎಂದೇ ಬಹುತೇಕರು ಭಾವಿಸಿದ್ದಾರೆ. ಸದ್ಯಕ್ಕೆ ಅವರನ್ನು ಕನ್ಫೆಷನ್ ರೂಮ್ನಲ್ಲಿ ಇರಿಸಲಾಗಿದೆ. ಅಸಲಿ ವಿಷಯ ಏನೆಂದರೆ, ಈ ವಾರ ಎಲಿಮಿನೇಷನ್ ಇಲ್ಲ. ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಜನರ ವೋಟಿಂಗ್ ಬಂದಿದ್ದು ಟಾಸ್ಕ್ಗೆ ಮಾತ್ರ. ಹಾಗಾಗಿ ಚೈತ್ರಾ ಕೂಡ ವಾಪಸ್ ಮನೆಯ ಒಳಗೆ ಹೋಗಲಿದ್ದಾರೆ. ಈ ವಿಷಯ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.