2018ರಲ್ಲಿ ತೆರೆಕಂಡಿದ್ದ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ಸಿನಿಮಾ ತೆರೆಕಂಡು 6 ವರ್ಷಗಳ ಬಳಿಕ ಸೀಕ್ವೆಲ್ ಮಾಡಲು ಚಿತ್ರತಂಡ ಮುಂದಾಗಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು ಚಿತ್ರತಂಡ ಇದೀಗ ಅದ್ದೂರಿಯಾಗಿ ಚಿತ್ರದ ಮುಹೂರ್ತ ನೆರವೇರಿಸಿದೆ.
‘ಅಯೋಗ್ಯ 2’ ಸಿನಿಮಾ ಮುಹೂರ್ತ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಆ ಮೂಲಕ ಶೂಟಿಂಗ್ಗೆ ಚಾಲನೆ ನೀಡಲಾಗಿದೆ.
ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮುನೇಗೌಡ ಅವರು ‘ಎಸ್ವಿಸಿ ಪ್ರೊಡಕ್ಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮುಹೂರ್ತ ಕಾರ್ಯಕ್ರಮಕ್ಕೆ ಬಂದು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ನೆನಪಿರಲಿ ಪ್ರೇಮ್, ಶ್ರೇಯರ್ ಮಂಜು, ಪ್ರಮೋದ್ ಮುಂತಾದವರು ಕೂಡ ಹಾಜರಿದ್ದು ಶುಭ ಕೋರಿದರು.
ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ನಿರ್ದೇಶಕ ಮಹೇಶ್ ಮಾತನಾಡಿದರು. ‘ಈ ಸಿನಿಮಾ ಕನ್ನಡ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ಬರಲಿದೆ. ಮೊದಲ ಭಾಗ ಹಿಟ್ ಆದ್ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ದೆವು. ಈಗ ಕನ್ನಡದ ಜೊತೆ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಮಾಡಲಿದ್ದೇವೆ’ ಎಂದು ಮಹೇಶ್ ಹೇಳಿದ್ದಾರೆ.
ನಿರ್ಮಾಪಕರ ಬಗ್ಗೆ ಸತೀಶ್ ನೀನಾಸಂ ಅವರು ಮೆಚ್ಚುಗೆಯ ಮಾತಾಡಿದರು. ‘ಅಯೋಗ್ಯ2 ಚಿತ್ರಕ್ಕೆ ನಿರ್ಮಾಪಕರ ದೊಡ್ಡ ಪಟ್ಟಿ ಇತ್ತು. ಅದರೆ ಅಂತಿಮವಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ. ಅವರು ಉತ್ತಮ ಪ್ರೊಡ್ಯುಸರ್. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾ ಆಗಲಿದೆ’ ಎಂದಿದ್ದಾರೆ ಸತೀಶ್. ಬಳಿಕ ಎಂ. ಮುನೇಗೌಡ ಮಾತನಾಡಿ, ‘ಮಹೇಶ್ ಅಯೋಗ್ಯ 2 ಸಿನಿಮಾ ಮಾಡಬೇಕು ಅಂತ ಹೇಳಿದಾಗ ಹಿಂದೆ-ಮುಂದೆ ಯೋಚಿಸದೇ ಒಪ್ಪಿಕೊಂಡೆ. ರಚಿತಾ ಕೂಡ ಈ ಸಿನಿಮಾ ಮಾಡಿ ಎಂದು ನಮಗೆ ಹೇಳಿದರು. ಹಲವು ಉತ್ತಮ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ’ ಎಂದರು.
ಈ ಸಿನಿಮಾ ಮೂಲಕ ನಟಿ ರಚಿತಾ ರಾಮ್ ಅವರಿಗೆ ‘ಲೇಡಿ ಸೂಪರ್ ಸ್ಟಾರ್’ ಎಂಬ ಬಿರುದು ನೀಡಲಾಗಿದೆ. ಆದರೆ ‘ನಾನು ಎಂದಿಗೂ ಅಭಿಮಾನಿಗಳ ಪ್ರೀತಿ ಬುಲ್ ಬುಲ್ ಆಗಿರುವೆ’ ಎಂದಿದ್ದಾರೆ ರಚಿತಾ. ‘6 ವರ್ಷಗಳ ಹಿಂದೆ ಇದೇ ಅಯೋಗ್ಯ ಸಿನಿಮಾ ಮುಹೂರ್ತ ಆಗಿತ್ತು. ಈಗ ಅಯೋಗ್ಯ 2 ಸೆಟ್ಟೇರುತ್ತಿದೆ. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಂ ಆಶೀರ್ವಾದವಿದೆ’ ಎಂದು ರಚಿತಾ ರಾಮ್ ಹೇಳಿದರು.
ರಚಿತಾ ರಾಮ್, ನೀನಾಸಂ ಸತೀಶ್ ಜೊತೆ ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ತಬಲ ನಾಣಿ, ಮಂಜು ಪಾವಗಡ ಅವರು ‘ಅಯೋಗ್ಯ 2’ ಚಿತ್ರದ ಪಾತ್ರವರ್ಗದಲ್ಲಿ ಇರಲಿದ್ದಾರೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ವಿಶ್ವಜಿತ್ ರಾವ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.