ಬೆಂಗಳೂರು:- ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕಳೆದ 5 ವರ್ಷದಲ್ಲಿ 81 ಜನರಿಗೆ ವಿದ್ಯುತ್ ತಂತಿ ತಗುಲಿದ್ದು, ಇದರಲ್ಲಿ ಒಟ್ಟು 70 ಜನ ಮೃತಪಟ್ಟಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಮ್ ಆದ್ಮಿ ಪಕ್ಷ ದೂರಿದೆ.
ನೆನ್ನೆಯಷ್ಟೇ ತಾಯಿ ಮತ್ತು ಮಗು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದೆ. ಈ ಸಂಬಂಧ ಬ್ರ್ಯಾಂಡ್ ಬೆಂಗಳೂರಿನ ಕುರಿತು ಮಾತನಾಡುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಸವಾಲು ಹಾಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮುನ್ನ ನಮ್ಮೊಂದಿಗೆ ಪಾದಯಾತ್ರೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಈ ವರ್ಷ ಬೆಸ್ಕಾಂ ವಿದ್ಯುತ್ ತಂತಿ ಅವಘಡದಿಂದ 8 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಒಟ್ಟು 21 ಜನರಿಗೆ ಬೆಸ್ಕಾಂ ವಿದ್ಯುತ್ ತಂತಿ ತಗುಲಿತ್ತು. ಈ ಪೈಕಿ 19 ಜನ ಸಾವೀಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಅಧಿಕಾರಿಗಳ ಬೇಜವಾಬ್ದಾರಿಗಳಿಂದ ಸಂಭವಿಸುತ್ತಿರುವ ಸಾವು-ನೋವುಗಳು ಅಮಾನವೀಯವಾಗಿವೆ ಎಂದರು.
ನಿರಂತರವಾಗಿ ಇಂತಹ ದುರಂತಗಳು ನಡೆಯುತ್ತಿದ್ದರೂ ಅಧಿಕಾರದಲ್ಲಿರುವವರು ಮೃತಪಟ್ಟ ದುರ್ದೈವಿಗಳ ಕುಟುಂಬ ಸದಸ್ಯರಿಗೆ ರೂ. 5 ಲಕ್ಷ ಪರಿಹಾರವನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಮುಂದೆಂದೂ ಇಂತಹ ಘಟನೆ ನಡೆಯದಿರುವಂತೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಖಂಡನಾರ್ಹ. ಒಂದು ಜೀವಕ್ಕೆ 5 ಲಕ್ಷ ರೂ. ಬೆಲೆಕಟ್ಟುತ್ತಿರುವುದು ಅಂತ್ಯಂತ ಅಮಾನವೀಯ ನಡೆ ಎಂದು ದೂರಿದರು.
ನಗರ ಬೀದಿಯಲ್ಲಿ ಓಡಾಡುವ ಪ್ರತಿಯೊಬ್ಬನು ಎಲ್ಲಿ ವಿದ್ಯುತ್ ತಂತಿ ತಲೆ ಮೇಲೆ ಬೀಳುತ್ತದೆ? ಎಲ್ಲಿ ಪಾದಚಾರಿ ರಸ್ತೆ ಕುಸಿದು ಚರಂಡಿ ಒಳಗೆ ಬೀಳುತ್ತೇವೆ, ಎಲ್ಲಿ ಒಣಗಿದ ಮರದ ಕೊಂಬೆ ಬೀಳುತ್ತದೆ, ಎಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪುತ್ತಿದ್ದಾರೆ. ಇಂತಹ ಘಟನೆಗಳ ಭಯದಲ್ಲೇ ದಿನನಿತ್ಯವೂ ಓಡಾಡಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.