ದಕ್ಷಿಣ ಭಾರತದಲ್ಲಿ ಹಿಂದಿನಿಂದಲೂ ದೇವಸ್ಥಾನ, ಪೂಜೆ ಕಾರ್ಯಕ್ರಮ, ಮದುವೆ ಕಾರ್ಯಕ್ರಮ ಇತ್ಯಾದಿಗಳಿಗೆ ಊಟ ಮಾಡಲು ಬಾಳೆ ಎಲೆಯನ್ನೇ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೆಲವೊಂದು ಮದುವೆ ಹಾಗೂ ಕಾರ್ಯಕ್ರಮಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ನೋಡಬಹುದು. ಬಾಳೆ ಹಣ್ಣನ್ನು ನಾವು ಸೇವನೆ ಮಾಡುವಂತೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಮುಖ್ಯವಾದ 6 ಲಾಭಗಳು ಇಲ್ಲಿವೆ. ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.

ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ. ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು.
ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು.
ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ. ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.