ಬೆಂಗಳೂರು:- ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ ಎಂದು ಸಿಎಂಗೆ ಕೋನರೆಡ್ಡಿ ಒತ್ತಾಯ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸು ಕಳಸಾ-ಬಂಡೂರಿ, ಮಹದಾಯಿ ಯೋಜನೆಗಳು. 20 ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದ್ದು, ಎಲ್ಲವೂ ಮುಗಿದಿದೆ. ಯೋಜನೆ ಪ್ರಾರಂಭವಾಗುವ ನಿರೀಕ್ಷೆ ರಾಜ್ಯದ ಜನತೆಗೆ ಇತ್ತು. ಮೊನ್ನೆ ಕೇಂದ್ರ ವನ್ಯಜೀವಿ ಮಂಡಳಿಯು ಅನುಮತಿಯನ್ನು ತಿರಸ್ಕರಿಸಿದೆ. ಸಿಎಂ ಕೂಡಲೇ ಸರ್ವಪಕ್ಷಗಳ ಸಭೆ ಮತ್ತು ಆ ಭಾಗದ ಶಾಸಕರನ್ನು ಕರೆದು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದ್ದೇನೆ. ಸಿಎಂ ಶೀಘ್ರವೇ ಇದರ ಬಗ್ಗೆ ವಿಚಾರ ಮಾಡಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು ಸಾಕಷ್ಟು ಭಾಷಣ ಮಾಡಿದ್ದರು. ಮಹದಾಯಿ ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ ಎಂದಿದ್ದರು. ಇವತ್ತು ಬಿಜೆಪಿಯವರು ತಮ್ಮ ಮಾತನ್ನು ಮರೆತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ನಾನು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ಯೋಜನೆ ಪ್ರಾರಂಭಕ್ಕೆ ಅನುಮತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.