ಬೆಂಗಳೂರು:- ಯಾದಗಿರಿ ಪಿಎಸ್ಐ ಅನುಮಾನಾಸ್ಪದ ಸಾವು ಕೇಸ್ ಗೆ ಸಂಬಧಪಟ್ಟಂತೆ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿದೆ.
ಕೆಲಸ ನಿರ್ವಹಿಸುತ್ತಿದ್ದ ವೇಳೆ ಯಾದಗಿರಿ ಪಿಎಸ್ಐ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಆದರೆ, ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರನೇ ಕಾರಣ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ. ಈ ಹಿನ್ನಲೆ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೇಸ್ನ್ನು ಸಿಐಡಿ ತನಿಖೆಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಇನ್ನೂ ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಪಂಪಣ್ಣಗೌಡ ಕಾರಣವೆಂದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕರು ಪೋಸ್ಟಿಂಗ್ ಕೊಟ್ಟಿಲ್ಲ. ಶಾಸಕರು ತಪ್ಪು ಮಾಡಿದ್ದಾರೆ ಅವರು ಸ್ಥಳಕ್ಕೆ ಬರಬೇಕು ಎಂದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಒತ್ತಾಯಿಸಿದ್ದಾರೆ. ಶ್ವೇತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಬಳಿ ದೂರು ನೀಡಿದ್ದಾರೆ.
ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿ ಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿ ಪೂರ್ವ ವರ್ಗಾವಣೆಯಿಂದ ಪಿಎಸ್ಐ ಪರಶುರಾಮ ನೊಂದಿದ್ದರು. ಏಳು ತಿಂಗಳ ಅವಧಿಯಲ್ಲಿ ಶಾಸಕರು ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ. ವರ್ಗಾವಣೆ ಮಾಡುತ್ತಿರುವುದು ಸಿಎಂ, ಗೃಹಸಚಿವರ ಗಮನಕ್ಕೆ ಬರಲಿಲ್ವಾ? ಎಂದು ಮೃತ ಪಿಎಸ್ಐ ಪರಶುರಾಮ ಮಾವ ವೆಂಕಟಸ್ವಾಮಿ ಗಂಭೀರ ಆರೋಪ ಮಾಡಿದರು
ತಪ್ಪಿತಸ್ಥ ಎಂಎಲ್ಎ ಚನ್ನಾರೆಡ್ಡಿ ಪಾಟೀಲ್ರನ್ನು ಬಂಧಿಸುವಂತೆ ವಿವಿಧ ದಲಿತ ಪರ ಸಂಘಟನೆಗಳು ಮತ್ತು ಮೃತ ಪಿಎಸ್ಐ ಪರಶುರಾಮ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಪ್ರತಿಭಟನೆ ನಡೆಸಿದರು.