ಬೆಂಗಳೂರು:- ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತು ಆ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ದರ್ಶನ್ ಘಟನೆ ಒಂದು ಭಾಗ ಅಷ್ಟೇ. ಈ ಸರ್ಕಾರ ಬಂದ ನಂತರ ಪ್ರತಿದಿನ ಮಾನುಷ್ಯನ ಜೀವನದ ಬಗ್ಗೆ, ಜೀವ ತೆಗೆಯೋದ್ರಲ್ಲಿ ಭಯ ಭಕ್ತಿ ಹೊರಟು ಹೋಗಿದೆ. ಅದಕ್ಕೆ ಕಾರಣ ಈ ಸರ್ಕಾರದ ಆಡಳಿತ. ಒಂದು ಘಟನೆಯನ್ನು ಯಾಕೆ ಮಾತಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ವೈಯಕ್ತಿಕ ಕಾರಣದಿಂದ ಕೊಲೆ ಮಾಡುವುದು ರಾಜ್ಯದಲ್ಲಿ ಎಷ್ಟು ಸುಲಭವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಡೆಯೇ ಕಾರಣ. ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಬರುವಾಗ ಕೊಟ್ಟು ಬಂದಿದ್ದನ್ನ ಸಂಪಾದನೆ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತದಲ್ಲಿ ಸರಿಪಡಿಸಿಕೊಳ್ಳಲಿ ಎಂದು ತಿವಿದಿದ್ದಾರೆ.
ಇನ್ನೂ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನನ್ನ ವಿರುದ್ಧ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ನಾನು ಕೇಂದ್ರ ಮಂತ್ರಿ ಆಗಿರೋದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನನ್ನು ಜೈಲಿಗೆ ಹಾಕಿಸಬೇಕು ಅಂತ ಕಷ್ಟಪಡುತ್ತಿದ್ದಾರೆ. ಸರ್ಕಾರದವರು ಬಿಡದಿ ಜಮೀನು ದಾಖಲೆ ಹುಡುಕುತ್ತಿದ್ದಾರೆ. ಇದರಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.