ಬರದ ನಡುವೆ ಬಹುನಿರೀಕ್ಷೆಯಲ್ಲಿ ಸಾಹಸಪಟ್ಟು ಜಿಲ್ಲೆಯ 30ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಶೇ.30 ರಿಂದ ಶೇ.40 ರಷ್ಟು ಪ್ರಮಾಣದ ಭತ್ತ ಕೊಯ್ಲುಬಾಕಿ ಇದೆ. ಸಕಲೇಶಪುರ, ಆಲೂರು ತಾಲೂಕಿನಲ್ಲಿ ಹೆಚ್ಚು ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಭಾಗ ಮತ್ತು ಹೊಳೆನರಸೀಪುರ, ಅರಕಲಗೂಡು ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಹೊಂದಿದವರು ಮಾತ್ರ ಭತ್ತ ಬೆಳೆದಿದ್ದಾರೆ. ಉತ್ತಮ ಬೆಳೆಗೆ ನಿರೀಕ್ಷೆ ಮೀರಿದ ಬೆಲೆ ಸಿಗಲಿದೆ ಎಂಬ ಸಂತಸದಲ್ಲಿದ್ದ ರೈತರಿಗೆ ಗುರುವಾರ ಮುಂಜಾನೆಯಿಂದ ಸಂಜೆವರೆಗೆ ದಿನವಿಡೀ ಸುರಿದ ತುಂತುರು ಮಳೆ ನಿರಾಸೆ ಮೂಡಿಸಿದೆ.
ಬೆಳೆದು ನಿಂತಿದ್ದ ಭತ್ತ ಕೊಯ್ಲು ಮಾಡಲು ಹೊರಟಿದ್ದವರನ್ನು ಮಳೆ ಕಂಗೆಡಿಸಿದೆ. ಗದ್ದೆಯಲ್ಲಿ ನೀರು ನಿಂತಿದ್ದು, ತೀವ್ರ ತಂಡಿಗಾಳಿ ವಾತಾವರಣ ಸೃಷ್ಟಿಯಾಗಿ ಭತ್ತ ತೋಯುತ್ತಿದೆ. ಒಂದೆರಡು ದಿನ ಮಳೆ ಮುಂದುವರಿದದ್ದೇ ಆದರೆ ಭತ್ತ ಉದುರಿ ನೆಲಕಚ್ಚುವುದು ನಿಶ್ಚಿತ
ಗದ್ದೆಯಲ್ಲಿ ನೀರು ನಿಂತಿದ್ದು, ಭತ್ತ ತೋಯ್ದಿದೆ. ಹೀಗಾಗಿ ಯಂತ್ರದ ಮೂಲಕ ಭತ್ತ ಕೊಯ್ಲು ಮಾಡಲು ಆಗಲ್ಲ. ಹೀಗೆ ಮಳೆ ಮುಂದುವರೆದರೆ ಉದುರಿ ಹೋಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ