ಬೆಂಗಳೂರು : ಮಹಿಳೆಯ ಚೈನ್ ಕಸಿದು ಆಟೋದಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಚೋರರನ್ನು ಮಾಗಡಿ ರಸ್ತೆ ಸಂಚಾರಿ ಪೊಲೀಸರು ಹಿಡಿದು ಜೈಲಿಗಟ್ಟಿರುವ ಘಟನೆ ನಡೆದಿದೆ.
ಸೆಂಥಿಲ್ ಹಾಗು ವಿಜಯ್ ಬಂಧಿತ ಆರೋಪಿಗಳು, ಮಾಗಡಿ ರಸ್ತೆಯ ದಿನತಂತಿ ಜಂಕ್ಷನ್ ಬಳಿ ಮಹಿಳೆಯೊಬ್ಬರು ತಮ್ಮ ಕೊರಳಿನಲ್ಲಿದ್ದ ಚೈನ್ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಮಾಗಡಿ ರಸ್ತೆ ಸಂಚಾರಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರೌವೃತ್ತರಾದ ಸಂಚಾರಿ ಪೊಲೀಸರು ಚೈನ್ ಕದ್ದು ಆಟೋದಲ್ಲಿ ಪರಾರಿಯಾಗುತ್ತಿದ್ದ ಕಳ್ಳರನ್ನು ಚೇಸ್ ಮಾಡಿ ಹಿಡಿದು ಬಂಧಿತರಿಂದ ಚಿನ್ನದ ಸರ ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಸಂಚಾರಿ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದ ಸಂಪೂರ್ಣ ದೃಶ್ಯಗಳು ಸಂಚಾರಿ ಪೊಲೀಸರು ಧರಿಸಿದ್ದ ಬಾಡಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪ್ರಕರಣದಕ್ಕೆ ಸಂಬಂದಿಸಿ ಸಿಬ್ಬಂದಿಗಳ ಸಾಹಸಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಹೊಸ ವರ್ಷದಂದು ಮಾಗಡಿ ರಸ್ತೆಯ ದಿನತಂತಿ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸರಾದ ಎಎಸ್ಐ ರಾಮಚಂದ್ರ ಹಾಗು ಸಂಚಾರಿ ಪಿಸಿ ಸಂಧ್ಯ ಎನ್ನುವವರು ಕಳ್ಳರನ್ನು ಹಿಡಿದು ಒಡವೆಗಳನ್ನು ವಶಕ್ಕೆ ಪಡೆದಿದ್ದು ಅವರ ಸಾಹಸಕ್ಕೆ ಇಲಾಖೆ ಅಭಿನಂದಿಸುತ್ತದೆ ಎಂದಿದ್ದಾರೆ.